ರಾಂಚಿ: ಜಾರ್ಖಂಡ್ನ ಪೂರ್ವ ಸಿಂಗ್ಭೂಮ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಆರೋಪದಲ್ಲಿ ಇಬ್ಬರು ಯುವಕರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಯಾದವರನ್ನು ಕುಚಿಯಾಸೋಲಿ ಗ್ರಾಮದ ಕಿ ಕಿನ್ಶುಕ್ ಬೆಹೆರಾ (35) ಮತ್ತು ಭೋಲಾನಾಥ್ ಮಹತೋ (26) ಎಂದು ಗುರುತಿಸಲಾಗಿದೆ. ಈ ಘಟನೆ ಶನಿವಾರ ಮುಂಜಾನೆ ಚಾಕುಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಾಹತು ಪಂಚಾಯತ್ನ ಜೋಡಿಸಾ ಗ್ರಾಮದಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಜೋಡಿಸಾ ಗ್ರಾಮದಲ್ಲಿ ಇದಕ್ಕೂ ಮೊದಲು ಮೇಕೆಗಳ ಕಳ್ಳತನದ ಹಲವು ಪ್ರಕರಣಗಳು ವರದಿಯಾಗಿದ್ದವು. ಶನಿವಾರ ಮುಂಜಾನೆ, ಹರಗೋವಿಂದ್ ನಾಯಕ್ ಎಂಬ ವ್ಯಕ್ತಿಯ ಮನೆಯ ಸಮೀಪ ಕಿನ್ಶುಕ್ ಬೆಹೆರಾ ಮತ್ತು ಭೋಲಾನಾಥ್ ಮಹತೋ ಅವರು ಮೇಕೆಯೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ, ಅವರು ಮೇಕೆ ಕಳ್ಳತನ ಮಾಡುತ್ತಿದ್ದಾರೆಂದು ನಾಯಕ್ ಕೂಗಿದ್ದಾನೆ. ತಕ್ಷಣವೇ, ಸ್ಥಳೀಯರು ಬೆಹೆರಾ ಮತ್ತು ಮಹತೋ ಅವರನ್ನು ಬೆನ್ನಟ್ಟಿ ಹಿಡಿದು ಅವರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರೆ.
ಘಟನೆಯಲ್ಲಿ ಕಿನ್ಶುಕ್ ಬೆಹೆರಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಭೋಲಾನಾಥ್ ಮಹತೋ ಗಂಭೀರವಾಗಿ ಗಾಯಗೊಂಡಿದ್ದ. ಅವನನ್ನು ಜೆಮ್ಶೆಡ್ಪುರದ ಎಂಜಿಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈಸ್ಟ ಸಿಂಗ್ಭೂಮ್ ನ ಪೊಲೀಸ್ ಅಧೀಕ್ಷಕ ರಿಷಬ್ ಗಾರ್ಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಗ್ರಾಮಸ್ಥರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.