ಹೈದರಾಬಾದ್: ಗುಂಪುಹತ್ಯೆಯಿಂದ ತನ್ನ ತಂದೆಯನ್ನು ರಕ್ಷಿಸಲು ಮುಂದಾದ 16 ವರ್ಷದ ಅಲಿಯಾ ಬೇಗಂ, ದುಷ್ಕರ್ಮಿಗಳ ಕಲ್ಲಿನ ಏಟಿಗೆ ಬಲಿಯಾಗಿದ್ದಾಳೆ. ಈ ಘಟನೆ ತೆಲಂಗಾಣದ ಜಹೀರಾಬಾದ್ನ ಅಂತರಾಮ್ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ನಿವಾಸಿ ಮುಹಮ್ಮದ್ ಇಸ್ಮಾಯಿಲ್, ವೀರಾ ರೆಡ್ಡಿ ಮತ್ತು ವಿಜಯ್ ರೆಡ್ಡಿ ಎಂಬವರ ಮನೆಯ ಬಳಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವಿಚಾರಕ್ಕೆ ಜಗಳ ಆರಂಭವಾಗಿದೆ. ಸ್ವಲ್ಪ ಸಮಯದ ನಂತರ ವೀರಾ ರೆಡ್ಡಿ ಮತ್ತು ವಿಜಯ್ ರೆಡ್ಡಿ, ಇನ್ನೂ 40 ಮಂದಿಯೊಂದಿಗೆ ಅಲ್ಲಿಗೆ ಬಂದು ಎಲ್ಲಾ ಸೇರಿ ಇಸ್ಮಾಯಿಲ್ ಮೇಲೆ ಹಲ್ಲೆ ಆರಂಭಿಸಿದ್ದಾರೆ. ಇದನ್ನು ನೋಡಿದ ಅಲಿಯಾ, ತಂದೆಯನ್ನು ರಕ್ಷಿಸಲು ಮುಂದಾದಾಗ, ದುಷ್ಕರ್ಮಿಗಳು ಆಕೆಯ ಮೇಲೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಅಲಿಯಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮೂರು ದಿನಗಳ ಚಿಕಿತ್ಸೆಯ ನಂತರ, ಫೆಬ್ರವರಿ 15ರಂದು ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.